ಜನಮನ ಗೆದ್ದ ಯಕ್ಷಗಾನ ಬಯಲಾಟ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 10 , 2013
|
ನವ೦ಬರ್ 10 , 2013
|
ಜನಮನ ಗೆದ್ದ ಯಕ್ಷಗಾನ ಬಯಲಾಟ
ಶಿರಸಿ :
ತಾಲೂಕಿನ ಕಡಬಾಳ ಶಾಲಾ ಸಭಾಭವನದಲ್ಲಿ ನಡೆದ ಗದಾಯುದ್ಧ ಮತ್ತು ರಕ್ತರಾತ್ರಿ ಆಖ್ಯಾನದ ಯಕ್ಷಗಾನ ಬಯಲಾಟ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಾಂಗಣ ಯಕ್ಷಗಾನ ಮತ್ತು ಜಾನಪದ ಕಲಾಸಂಘ ಕಡಬಾಳ ಹಾಗೂ ಯಕ್ಷಕಿರಣ ಕೋಳಿಗಾರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಪ್ಪ ಹೆಗಡೆ ಬಾಳೆಹದ್ದ ಹಾಗೂ ಗಣಪತಿ ಹೆಗಡೆ ತಟ್ಟೀಸರ ಇವರ ದ್ವಂದ ಹಾಡುಗಾರಿಕೆ, ಮದ್ದಳೆ ವಾದಕರಾಗಿ ಶ್ರೀಪಾದ ಭಟ್ಟ ಮೂಡಗಾರ, ಚಂಡೆ ವಾದಕರಾಗಿ ಸತೀಶ ಉಪಾಧ್ಯ ಉಡುಪಿ, ಪ್ರಸನ್ನ ಭಟ್ಟ ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ಅತಿಥಿ ಕಲಾವಿದರಾಗಿ ಕಶ್ಯಪ ಪ್ರತಿಷ್ಠಾನ ಗಡಿಗೆಹೊಳೆ ಮೇಳದ ವಸುಮತಿ ಹೆಗಡೆ (ಭೀಮ), ನಿರ್ಮಲಾ ಹೆಗಡೆ ಗೋಳಿಕೊಪ್ಪ (ಕೌರವ), ಸದಾನಂದ ಪಟಗಾರ (ಅಶ್ವತ್ಥಾಮ), ಪ್ರದೀಪ ಹೆಗಡೆ (ಕಷ್ಣ), ಸಿಂಧು ಭಟ್ಟ ಸಾಲ್ಕಣಿ (ದರ್ಮರಾಯ), ಭಾರ್ಗವಿ ಭಟ್ಟ ಮತ್ತು ನಾಗಶ್ರೀ ಭಟ್ಟ ಥಂಡೀಮನೆ (ನಕುಲ-ಸಹದೇವ), ಚಿನ್ಮಯ ಭಟ್ಟ (ಸಂಜಯ), ಅಶ್ವತ್ಥ ಭಟ್ಟ (ಭೀಮ), ಲೊಕೇಶ ಮುಕ್ರಿ (ಅರ್ಜುನ), ಕೌಶಿಕ ಗೌಡ, ನಾರಾಯಣ ಹೆಗಡೆ (ಬೇಹುಚರರು), ಮೂರನೇ ತರಗತಿಯ ವಿದ್ಯಾರ್ಥಿ ಭೂಷಣ ಜಿ.ಹೆಗಡೆ ಓಣಿಕೇರಿ (ಬಾಲಗೋಪಾಲ) ಅಭಿನಯಿಸಿದರು.
ಸಭಾ ಕಾರ್ಯಕ್ರಮದಲ್ಲಿ ಎಂ.ಜಿ.ಹೆಗಡೆ ಪ್ರತಿಷ್ಠಾನದ ಗಣಪತಿ ಹೆಗಡೆ ವಾರಣಾಶಿಮನೆ ಮಾತನಾಡಿ, ನಮ್ಮ ಭಾಗದ ಮಕ್ಕಳಲ್ಲಿ ಯಕ್ಷಗಾನದ ಸಂಸ್ಕಾರ ಬೆಳೆಸಲು ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದ್ದು ಪ್ರತಿವರ್ಷ ಬೇಸಿಗೆಯಲ್ಲಿ ಉಚಿತ ಶಿಬಿರ ನಡೆಸುವ ಮೂಲಕ ಕಲಾ ಸೇವೆ ಮಾಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಕಾ ಶಿಬಿರಕ್ಕೆ ಸೇರಿಸಿ ತರಬೇತಿ ಕೊಡಿಸಬೇಕು. ನಮ್ಮಲ್ಲಿ ತರಬೇತಿ ಪಡೆದ ಮಕ್ಕಳು ಉತ್ತಮ ಕಲಾವಿದರಾಗಿ ರೂಪಗೊಂಡಿದ್ದಾರೆ. ಮಹಿಳೆಯರು ಸಹ ಈಗ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ವಹಿಸಿ ಪಾತ್ರ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಕಾಶ್ಯಪ ಪ್ರತಿಷ್ಠಾನದ ರೂವಾರಿ ಸುಬ್ರಾಯ ಭಟ್ಟ ಗಡಿಗೆಹೊಳೆ ಮಾತನಾಡಿ, ಕಡಬಾಳ ಮೊದಲಿನಿಂದಲೂ ಯಕ್ಷಗಾನದಲ್ಲಿ ಆಸಕ್ತಿ ಇರುವ ಸ್ಥಳವಾಗಿದ್ದು ಇಲ್ಲಿ ಕಲೆಗೆ ಪ್ರೋತ್ಸಾಹ ಸಿಗುತ್ತಿದೆ. ಅನೇಕ ಹಿರಿಯರು ಇಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ವಿದ್ವಾನ್ ಗಣಪತಿ ಭಟ್ಟ ಮೋದೂರು ಮಾತನಾಡಿ, ಯಕ್ಷಗಾನ ದಕ್ಷಿಣೋತ್ತರ ಜಿಲ್ಲೆಗಳ ಜನರ ಮನಸ್ಸಿನಲ್ಲಿ ಅಗಾಧವಾಗಿ ಬೇರು ಬಿಟ್ಟಿದ್ದು, ಉಳಿದೆಲ್ಲ ಕಲೆಗಳಿಗಿಂತ ಯಕ್ಷಗಾನವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಅದು ಸಂಸ್ಕಾರ ಕೊಡುವ ಕಲೆಯಾಗಿದೆ. ನವರಸಗಳೂ ಯಕ್ಷಗಾನದಲ್ಲಿ ಮೆಳೆಸಿರುವುದರಿಂದ ಇಂದಿಗೂ ತನ್ನ ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದೆ ಎಂದರು.
ಗ್ರಾಪಂ ಸದಸ್ಯ ಟಿ.ಎಂ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಜೋಶಿ ಸೋಂದಾ, ಬಾಲಚಂದ್ರ ಹೆಗಡೆ ಕಡಬಾಳ, ಎಂ.ಜಿ.ಹೆಗಡೆ ಉದ್ದೇಮನೆ ಉಪಸ್ಥಿತರಿದ್ದರು. ಸದ್ಭಾವನಾ ಸಂಸ್ಥೆಯ ಜಿ.ವಿ.ಹೆಗಡೆ ಓಣಿಕೇರಿ ನಿರೂಪಿಸಿದರು. ಗಣಪತಿ ಭಟ್ಟ ವಂದಿಸಿದರು. ಡಿ.ಜಿ.ಭಟ್ಟ ಕೋಳಿಗಾರ ಹಾಗೂ ಜಟ್ಟಿ ಕಡಬಾಳ ಸಂಯುಕ್ತವಾಗಿ ಕಾರ್ಯಕ್ರಮ ಸಂಘಟಿಸಿದ್ದರು.
ಕೃಪೆ : http://www.http://vijaykarnataka.indiatimes.com/
|
|
|